ಎಲ್ಲರ ಕನ್ನಡ ಕೀಲಿಮಣೆಯ ಬಗ್ಗೆ:
ಹೆರನುಡಿಗಳನ್ನು ನಾವು ಮಾತಿನಲ್ಲಿ ಸುಳುವಾಗಿ ಉಲಿದರೂ ಬರೆಯುವಾಗ ಮಾತ್ರ ತೊಡಕಿನಿಂದ ಹೆದ್ದುಲಿಗಳಾಗಿ ಬರೆಯುತ್ತೇವೆ. ನುಡಿ ಅಂದರೆ ಮಾತೆ ಹೊರತು ಬರಹವಲ್ಲ. ಒಂದು ನುಡಿಗೆ ನೀವು ಯಾವುದೇ ಬರಹವನ್ನಾದರೂ ಬಳಸಬಹುದು. ಎತ್ತುಗೆಗೆ nanu hogi baruttene ಎಂದು ಬರೆದರೆ ಇದು ಬೇರೆ ಬರಿಗೆಯಲ್ಲಿ ಇದ್ದರು ಕೂಡ ಕನ್ನಡ ನುಡಿಯೇ ಆಗಿದೆ ಎಂದು ನಮಗೆ ತಿಳಿಯುತ್ತದೆ. ಹೀಗಾಗಿ ನಾವು ಯಾವುದೇ ನುಡಿಯನ್ನು ಬರೆಯಲು ಯಾವುದೇ ಬರಿಗೆಯನ್ನು ಬಳಸಿದರು ಅಲ್ಲಿ ಬರಿಗೆ ಮಾರ್ಪಟ್ಟಿರುತ್ತದೆಯೇ ಹೊರತು ನುಡಿಯಲ್ಲ. ಹಾಗಾಗಿ ನಾವು ಏನನ್ನು ಮಾತಾಡುತ್ತೇವೆಯೋ ಅದನ್ನೇ ಬರೆಯುವುದು ಹೆಚ್ಚು ಸರಿ ಎಂಬುದಾಗಿ ನುಡಿಯರಿಗ ಡಾ. ಶಂಕರ ಬಟ್ ಹೇಳುತ್ತಾರೆ.
ಆದರೂ ನಾವು ಹಿಂದಿನಿಂದಲೂ ಮಾತಿನಲ್ಲಿ ಇಲ್ಲದ ಹೆದ್ದುಲಿಗಳನ್ನು ಬರಹದಲ್ಲಿ ಬರೆಯುತ್ತಾ ಬಂದಿದ್ದೇವೆ. ಇದರ ತೊಡಕು ಏನೆಂದರೆ ಬೇಡದೆ ಹೋಗಿದ್ದರೂ ಕೂಡ ಖ, ಘ, ಞ, ಙ, ಢ, ಥ, ಧ, ಫ, ಭ, ಷ ಮುಂತಾದ ಬರಿಗೆಗಳನ್ನು ಕಲಿಯಲೇ ಬೇಕಾಗಿದೆ. ಇಂತಹ ಬೇಡದ ಬರಿಗೆಗಳನ್ನು ಬಳಸದೆ ಹೆದ್ದುಲಿಗಳನ್ನೂ ಕೂಡ ಕಿರುವುಲಿಗಳಾಗಿಯೇ ಬರೆಯುವ ಬಗೆಯೇ "ಎಲ್ಲರ ಕನ್ನಡ" ವೆಂದು ಹೆಸರಾಗಿದೆ. ಇದನ್ನು ಮೇಲೊತ್ತಿನದಾಗಿ ಬಳಕೆಗೆ ತಂದವರು ಡಾ. ಶಂಕರ ಬಟ್ ಅವರೇ ಆಗಿದ್ದಾರೆ. ಹಳಮೆಯ ಕನ್ನಡದ ಕಬ್ಬಿಗರು ಕೂಡ ಸಕ್ಕದ ಹಲವು ತೊಡಕಿನ ಒರೆಗಳನ್ನು ಕನ್ನಡದಲ್ಲಿ ಬಳಸಬೇಕಾಗಿ ಬಂದಾಗ ಅವುಗಳನ್ನು ಕಿರುವುಲಿಗಳಿಗೆ ಒಗ್ಗಿಸಿ "ತದ್ಭವ"ಗಳನ್ನಾಗಿ ಮಾಡಿಕೊಂಡಿದ್ದು ಕೂಡ ಇದೆ ಬಗೆಯಲ್ಲಿ.